== ಹಗಲು ವೇಷಗಾರರು == ಮುಖಕ್ಕೆ ಬಣ್ಣ, ವೇಷ ಭೂಷಣದೊಂದಿಗೆ ರಾಮಾಯಣ ನಾಟಕದ ಮೂಲಕ ಮಕ್ಕಳು ಮತ್ತು ಜನರನ್ನು ರಂಜಿಸಿ, ತಮ್ಮ ಕಲೆ, ಸಂಸ್ಕೃತಿಯನ್ನು ಬಿಂಬಿಸುತ್ತಿದ್ದ ಹಗಲು ವೇಷಗಾರರು ಇಂದಿನ ದಿನಗಳಲ್ಲಿ ಮರೆಯಾಗುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಸಿದ್ದಾಪುರ, ತಾವರಗೇರಾ ಕುದರಿಮೋತಿ, ನೂಲ್ವಿ ಹಾಗೂ (ರಾಯಚೂರು) ಜಿಲ್ಲೆಯ ಮಸ್ಕಿ, ಮಾನವಿಯಲ್ಲಿ ಹಗಲು ವೇಷಗಾರರು ಅಲ್ಲಲ್ಲಿ ಕಂಡು ಬರುತ್ತಿದ್ದು, ಶತಶತಮಾನಗಳ ಬಣ್ಣದ ಬದುಕು ಬಿಟ್ಟು ತಮ್ಮ ಮೂಲ ಕಲೆಯನ್ನು ಮರೆಯುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ 2 ವರ್ಷಕ್ಕೊಮ್ಮೆ 10-15 ದಿನಗಳ ಕಾಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾಮಾಯಣ, ಕುರುಕ್ಷೇತ್ರಗಳ ಬಗ್ಗೆ ಕಥೆಯ ನಾಟಕವಾಡಿ ಜನರನ್ನು ರಂಜಿಸುತ್ತಿದ್ದರು. 15 ದಿನಗಳ ನಂತರ ಕಾಸು ಪಡೆಯುತ್ತಿದ್ದರು. ಈಗ ಬಹುತೇಕ ಕಣ್ಮರೆಯಾಗುತ್ತಿದೆ. == ಕಾಯಕ ಹೀಗೆ == ಮಹಾರಾಷ್ಟ್ರದ ಪುಣೆ, ಮುಂಬಯಿ, ಕೊಲ್ಲಾಪುರ ನಗರಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉತ್ಸವ, ರಾಜ್ಯೋತ್ಸವ, ಪ್ರತಿಭಟನೆ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ವೇಷಗಾರರು ಅನೇಕ ಕುಟುಂಬದಿಂದ 10 ರಿಂದ 12 ಜನರ ತಂಡ ಸೀತೆ, ರಾಮ, ಲಕ್ಷ್ಮಣ, ಹನುಮಂತ, ನಕುಲ, ಸಹದೇವ, ದುರ್ಯೋಧನ, ಪಾಂಚಾಲಿ, ರಾಕ್ಷಸ ಸೇರಿದಂತೆ ನಾನಾ ವೇಷ ಧರಿಸಿ ರಾಮಾಯಣದ ಗೀತೆ, ಭಾವಗೀತೆ, ಭಕ್ತಿ ಗೀತೆಗಳ ಮೂಲಕ ಮಕ್ಕಳನ್ನು ರಂಜಿಸುತ್ತಿದ್ದರು. == ಪರ್ಯಾಯ ಕೆಲಸ == ಹಗಲುವೇಷ ಧರಿಸಿ ರಾಮ, ರಾವಣರ ಕಥೆ ಹೇಳುವ ಮೂಲಕ ಹಣ ಸಂಪಾದಿಸಿ ಕೆಲ ವೇಷಗಾರರು ಸ್ವಂತ ಮನೆ ನಿರ್ಮಿಸಿಕೊಂಡು ಗದ್ದೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕೆಲ ವೇಷಗಾರರು ಗೋಡೆ ಭಾವಚಿತ್ರ, ಪ್ಲ್ಯಾಸ್ಟಿಕ್ ತಂಬಿಗೆ, ದಿನದರ್ಶಿನಿ ಸೇರಿದಂತೆ ನಾನಾ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈಗ ಬೆರಳಣಿಕೆಯಷ್ಟು ವೇಷಗಾರರು ನೆನಪಾದಾಗ ಇಲ್ಲವೇ, ಕಾಟಾಚಾರಕ್ಕೆ ಎನ್ನುವಂತೆ ಭಕ್ತಿಗೀತೆ, ಸಂಸ್ಕೃತಿ ಮೂಲಕ ಕಾಸು ಪಡೆಯುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಈಗಲೂ ವೇಷಗಾರರ ಹಿಂದೆ ಮಕ್ಕಳ ದಂಡೇ ಬರುತ್ತಿದೆ. == ಉಲ್ಲೇಖಗಳು ==